ದಶಮಃ ದೀಕ್ಷಾಂತ ಸಮಾರಂಭ.

Share:

ಮೈತ್ರೇಯೀಗುರುಕುಲದಲ್ಲಿ ದಿನಾಂಕ 14.4.2025 ರಂದು ದೀಕ್ಷಾಂತ ಕಾರ್ಯಕ್ರಮವು ಸುಸಂಪನ್ನವಾಯಿತು. ದಶಮ ದೀಕ್ಷಾಂತ ಸಮಾರೋಹದ ಈ ಸಂದರ್ಭದಲ್ಲಿ 10 ಜನ ವಿದ್ಯಾರ್ಥಿನಿಯರು ಗುರುಕುಲ ಶಿಕ್ಷಣದ ಆಶಂಸನಪತ್ರವನ್ನು ಪಡೆದುಕೊಂಡರು. ಬೆಳಗ್ಗೆ 8.30 ಕ್ಕೆ ಸರಸ್ವತೀಹವನದ ಮೂಲಕ ದೀಕ್ಷಾಂತವಿಧಿಯು ಆರಂಭವಾಯಿತು. ವಿದ್ಯಾಧಿದೇವತೆಯಾದ ಸರಸ್ವತಿಯ ಅನುಗ್ರಹ ಪಡೆದ ನಂತರ 10.30ಕ್ಕೆ ದೀಕ್ಷಾಂತ ಕಾರ್ಯಕ್ರಮದ ಸಭಾಕಾರ್ಯಕ್ರಮವು ಆರಂಭವಾಯಿತು. ದೀಕ್ಷಾಂತಪ್ರಬೋಧಕರಾಗಿ ಕರ್ನಾಟಕ ಗುರುಕುಲ ಪ್ರಕಲ್ಪದ ಸಂಯೋಜಕರಾದ ಡಾ. ಮಹಾಬಲೇಶ್ವರ ಭಟ್ ಉಪಸ್ಥಿತರಿದ್ದರು. ದೀಕ್ಷಾಂತ ಎಂದರೆ ದೀಕ್ಷೆಯ ನಿರ್ಣಯಘಟ್ಟ. ಸಮಾವರ್ತನವನ್ನು ಮುಗಿಸಿದ ಮಕ್ಕಳು ಸಮಾಜದ ಎಲ್ಲರಂತೆ ಪ್ರವಾಹದ ಜೊತೆಗೆ ಹೋಗದೇ ಪ್ರವಾಹದ ವಿರುದ್ಧ ಈಜುತ್ತ ವಿಶಿಷ್ಟ ಜೀವನವನ್ನು ನಡೆಸ ಬೇಕೆಂದು ಪ್ರಬೋಧಿಸಿದರು.

ಗುರುಕುಲದ ಪ್ರಧಾನಾಚಾರ್ಯೆ ಶ್ರೀಮತಿ ಮಾತೃಶ್ರೀ ದೀಕ್ಷಾಂತದ ವಿದ್ಯಾರ್ಥಿನಿಯರಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಗುರುಕುಲದ ಆಚಾರ್ಯರು ಹಾಗೂ ಮಾತೃಶ್ರೀಯರೆಲ್ಲರೂ ಸೇರಿ ಶಿಷ್ಯಾನುಶಾಸನವನ್ನು ಹೇಳಿದರು. ಶ್ರೀ ಶಂಭುನಾಥ ಭಟ್ ಇವರು ಶಿಷ್ಯಾನುಶಾಸನದ ಸಾರಾಂಶವನ್ನು ಕನ್ನಡದಲ್ಲಿ ತಿಳಿಸಿದರು. ಶ್ರೀ ಗಣೇಶ್ ಐತಾಳ್ ಇವರು ಆಶಂಸನಪತ್ರವನ್ನು ಓದಿದರು.

10ಜನ ವಿದ್ಯಾರ್ಥಿನಿಯರಿಗೆ ಆಶಂಸನಪತ್ರ ಹಾಗೂ ದೀಪವನ್ನು ನೀಡಲಾಯಿತು.

ಶ್ರೀಸುಬ್ರಾಯ ಪೈಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಾವಿತ್ರೀಮಾತೃಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವನಜಾ ಆರ್ಯಾ ಕಾರ್ಯಕ್ರಮವನ್ನು ನಿರೂಪಿಸಿದರು.